Sunday, December 13, 2009

"ಮುಗ್ದತೆ"

ಹಕ್ಕಿಯು ಹಾರಿತ್ತು ಆಹಾರಕ್ಕೆಂದು
ಗೂಡಲ್ಲಿ ಇಟ್ಟಿತ್ತು ಮೊಟ್ಟೆಯನು ಒಂದು
ಹಾವೊಂದು ಬಂದಿತು ಸರಿದಾಡಿಕೊಂಡು
ಮೊಟ್ಟೆಯು ಸೂಸಿದ್ದ ವಾಸನೆಯ ಹಿಡಿದು

ಖುಷಿಯಾಯ್ತು ಹಾವಿಗೆ ಯಾರಿಲ್ಲ ಎಂದು
ಎಡೆಯತ್ತಿ ನಿಂತಿತು ತಿನ್ನೊಣವೆಂದು

ಮೊಟ್ಟೆಯಲಿ ಮಲಗಿದ್ದ ಹಕ್ಕಿಮರಿ ಎದ್ದು
ಮೊಟ್ಟೆಯನು ಹೊಡೆದು ಹೊರಬಂದು
ಎಡೆಯೆತ್ತಿ ನಿಂತಿದ್ದ ಹಾವನ್ನು ಕಂಡು
ತಬ್ಬಿ ಪ್ರೀತಿಯಲಿ ಮುತ್ತಿಟ್ಟು 'ಅಮ್ಮಾ'ಅಂತು

ಹಾವಿಗೆ ಭಯವಾಯ್ತು ಪ್ರೀತಿಯ ಅರಿವಾಯ್ತು
ಮರಳಲ್ಲಿ ತಾನಿಟ್ಟ ಮೊಟ್ಟೆಯ ನೆನಪಾಯ್ತು
ಆ ಹಕ್ಕಿ ಮರಿಗೆ ಪ್ರತಿಯಾಗಿ ಮುತ್ತಿಟ್ಟು
'ನಿನ್ನಮ್ಮ ಬರುತಾಳೆ ಇರುಮಗು' ಎಂದು
ಮುಜುಗರದಿ ಹೊರಟೊಯ್ತು..

ಆ ಹಕ್ಕಿ ಮರಿಯು ಅಮ್ಮ.. ಅಮ್ಮಾ...
ಕೂಗಿತಲೇ ಇತ್ತು.

"ನನ್ನವ್ವ"

ಜನ್ಮ ನೀಡಲು ತಿಂದ ನೋವುಗಳೆಷ್ಟೋ
ಬದುಕುಳಿಯಲು ಕಟ್ಟಿದ ಹರಕೆಗಳೆಷ್ಟೋ
ಉಪವಾಸವಿದ್ದು ನೀಡಿದ ಕೈತುತ್ತುಗಳೆಷ್ಟೋ

ಕಣ್ಣೀರ ಒರೆಸಿ, ಬರವಸೆಯ ತರಿಸಿ
ಚೂರು ರೊಟ್ಟಿಯ ತಿನಿಸಿ,ಕಟ್ಟಿ ಪ್ರೀತಿಯ ಬುತ್ತಿ
ಶಾಲೆಗೆ ಕಳುಹಿಸಿದ ಮೊದಲ ದಿನವೇ
ಭವಿಷ್ಯದ ಸಸಿ ನೆಟ್ಟಳು ನನ್ನವ್ವ

ಹಸಿಯಾದ ಮನದಲ್ಲಿ ಆಲದ ಮರ ಬೆಳೆಸಿ
ಬದುಕು-ಕಟ್ಟುವ ಕನಸು ವಿಶ್ವಾಸ ಮೂಡಿಸಿ
ನೈತಿಕತೆ ಕೈಹಿಡಿಸಿ ನನ್ನನ್ನು ನಡೆಸಿ
ಎಲ್ಲರನು ಗೌರವಿಸು, ನಕ್ಕು-ನಗಿಸು
ಬದುಕಿಸಿ-ಬದುಕು ಹೊರಡೆಂದಳು ನನ್ನವ್ವ

ಬೆಳಗುತಿದೆ ಇಂದಿಗೂ ಅವ್ವ ಹಚ್ಚಿದ ಹಣತೆ
ಹರಿಯಲಿ ಮುಂದೆಯೂ ಅ ಪ್ರೀತಿ-ಸ್ನೆಹದ ಒರತೆ
ಬ್ರಂಹಾಂಡ ಸೃಷ್ಠಿಸುವ ಓ ಸೃಷ್ಠಿಬ್ರಹ್ಮನೇ
ಬರೆದುಬಿಡು ಈಗಲೇ ಮುಂದಿನ ಜನ್ಮಕೂ
ಇರಲಿ ನನಗೆ ಈ ನನ್ನ ‘ಅಮ್ಮ’ನೆ

"ನೀವೇಕೆ ಹೀಗೆ?"

ಈ ಹುಡಿಗಿಯರೇ ಹೀಗೆ
ಹೂವಿನ ಹಾಗೆ
ಬಳ್ಳಿಯಂತೆ ಬಳುಕುತ್ತ
ಕಣ್ಣ ಅಯಸ್ಕಾಂತ ನೂಟ ಬೀರಿ
ಹುಡುಗರನ್ನು ತಮ್ಮೆಡೆಗೆ
ಸೆಳೆಯುತ್ತಾರೆ ಕೆಲವೇ ಕ್ಷಣಗಳಲ್ಲಿ

ಹುಡುಗರೆದೆಗಳು ಗುಡಿಗಳಾಗಿ
ಇವರು ದೇವತೆಗಳಾಗುತ್ತರೆ ಅಲ್ಲಿ,
ಅನುದಿನವು ಅನುಕ್ಷಣವು ಇವರದೇ
ಧ್ಯಾನ-ಆರಾಧನೆ,

ಕಾಲಸರಿದಂತೆ
ಕ್ರಮೇಣ ಮೆದುಳನ್ನು ತೋಳೆದು,
ವಾಸ್ತವತೆ ಮರೆಸಿ ನಿಗೂಡವಾಗಿ
ಮಾಯವಾಗುತ್ತಾರೆ ಮತ್ಯಾರೊ
ಭಕ್ತರೆದೆಗಳಲಿ ದೇವತೆಗಳಾಗಿ ಮೆರೆಯಲು
ಈ ಹುಡಿಗಿಯರು..!
ಈ ಹುಡಿಗಿಯರೇ ಹೀಗೆ
ಹೂವಿನ ಹಾಗೆ

"ನಿನ್ನ ನೆನಪು"

ನಿನ್ನ ನಿನಪ ಹೂವ ಬನದಿ
ಹಾರುತಿರುವೆ ದುಂಬಿಯಾಗಿ
ಸಿಹಿಯ ಕೊಡು ಬಾರೆ ನಲ್ಲೆ
ನಿನ್ನ ಮೊಗವ ತೊರಿನಂಗೆ

ನಿನ್ನ ಕೊರಳ ಹಾರದಲ್ಲಿ
ಮುತ್ತು-ರತ್ನ-ಹವಳದಂಗೆ
ಅಪ್ಪಿ ನಿನ್ನ ತಬ್ಬಿಕೊಂಡು
ಮುತ್ತು ಕೊಡುವ ಆಸೆ ನಂಗೆ

ಮೊದಲ ನೊಟದಲ್ಲೆ ನೀನು
ಏನೊ ಮೊಡಿ ಮಾಡಿ ಬಿಟ್ಟೆ
ನಿನ್ನ ಪ್ರೀತಿ ನಶೆಯ ಒಳಗೆ
ನಾ ಊಟ-ನಿದ್ರೆ ಮರೆತು ಬಿಟ್ಟೆ

ಹಚ್ಚಿ ಇಟ್ಟ ಪ್ರೀತಿ-ದೀಪ
ಬೆಳಗುತಿರಲಿ ದೃದಯದೊಳಗೆ
ನೀನು ನನಗೆ ಸಿಗದೆ ಹೊದ್ರು
ಆರದಿರಲಿ ಕೊನೆಯವರೆಗೆ.

"ಸುಟ್ಟುಬಿಡು"

ಸುಟ್ಟುಬಿಡು ಬೆಂಕಿಯೇ
‘ನಾನು’ ಎನ್ನುವ
ನನ್ನೊಳಗಿನ ನನ್ನನ್ನು

ನೀತಿಯಿಲ್ಲದೆ ಬೆಳೆವ,
ಅರ್ಥವಿಲ್ಲದೆ ಕವಿವ
ಭಾವನೆಯ ನೆಲೆಯನ್ನು

ಹತ್ತಿಬಿಡು ನೀನಿನ್ನು
ಸ್ವಾರ್ತಿಗಳ ಬೆನ್ನನ್ನು
ಪ್ರೀತಿ ಕರುಣೆಯ ಬಿಟ್ಟು
ನಂಬಿಕೆಗೆ ಕೈಕೊಟ್ಟು
ಹಣಕಾಗಿ ಜೋತಾಡೊ
ಜೀವಂತ ಹೆಣಗಳನು
ಸುಟ್ಟುಬಿಡು ಬೆಂಕಿಯೇ
ಸುಟ್ಟುಬಿಡು ಅವರನ್ನು

ಧರ್ಮ-ದೇವರ ಹೆಸರೆತ್ತಿ,
ತಾರ-ತಮ್ಯದ ನೆಲದಿ
ವಿಷಬೀಜ ಬಿತ್ತಿ, ಡಾಂಬಿಕತೆ
ಹರಡುವ ರೋಗಾಣು ಜನರನ್ನು
ಸುಟ್ಟುಬಿಡು ಬೆಂಕಿಯೇ
ಸುಟ್ಟುಬಿಡು ಅವರನ್ನು

ಕಳ್ಳರು-ಮಳ್ಳರು
ವಿಕೃತರು-ವಂಚಕರು
ಬಿಡಬೇಡ ಯಾರನ್ನು
ನನ್ನೊಳಗೂ ಇದ್ದಾರು !
ಬಿಡಬೇಡ ನನ್ನನ್ನು
ಸುಟ್ಟುಬಿಡು ಬೆಂಕಿಯೇ
‘ಸುಟ್ಟುಬಿಡು’

“ಕವನ”

ದಿನ ಕಾಯುವ
ಬಸುರಿಯೊಳಗಿನ
ಮಗುವಿನಂತೆ ಕವನ
ಹುಟ್ಟಿ ಬಿಡುತದೆ ಎಲ್ಲೊ,
ಯಾವ ಕ್ಷಣದಲ್ಲೊ!

ನೆನಪುಗಳು ಕದಲಿ
ಚೆಲ್ಲುವ ಹನಿಗಳ ಮಿಲನ
ಅಂತರಾಳದ ಭಾವನೆಗಳು
ಕೂಡುವ ಮೈಥುನ

ಮಡುಗಟ್ಟಿ ತೆಲುತದೆ ಕಲ್ಪನೆ,
ಗರಿಕೆದರಿ ಹಾಡುತದೆ
ಮನ ಸುಮ್ಮನೆ!

ತನು ತಾನು ಮೈಮರೆತು
ಅಂತರಾಳವ ಬಿಚ್ಚಿ
ಜೀವ ಸ್ರಷ್ಠಿಯ ಮೀಟಿ
ಹೊರಡುವ ಹೊಸರಾಗ
‘ಕವನ’

"ಸ್ವಾಗತ"

ಬನ್ನಿ
ಸ್ನೇಹಿತರೆ ನಿಮಗೆಲ್ಲಾ
'ಸ್ವಾಗತ'
ನಮ್ಮಮ್ಮ ಕನ್ನಡಮ್ಮ ಕಲಿಸಿದ್ದು
'ಮಾನವೀಯತೆ ' ಯ ಕಾಗುಣಿತ
ಮುಂದಿನದೆಲ್ಲಾ
ಬರವಸೆಯ ಅಕ್ಷರಗಳ ಬರೆದು
ಪ್ರೀತಿಯ ಕೊಂಬು,ಧೀರ್ಘ,ಒತ್ತುಗಳ ಎಳೆದು,
'ಶೂನ್ಯ-ಅನಂತತೆ'ಯ
ನಡುವಿನ ಬದುಕಿಗೆ ಅರ್ಥಬದ್ದ
ಪ್ರಾಸ ಕೂಡಿಸುವ ಬಲುಸರಳ
ಗಣಿತ